ಉಡುಪಿ: ಅಪ್ಪ-ಮಗ ಸೇರಿ ತಾವೇ ಓಎಲ್ಎಕ್ಸ್ನಲ್ಲಿ ಮಾರಿದ್ದ ಬಸ್ ನ್ನು ಪುನಃ ಕದ್ದು ಮನೆಗೆ ತಂದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ನಡೆದಿತ್ತು. ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಸ್ ಖರೀದಿಗೆ ನೀಡಬೇಕಾದ ಹಣವನ್ನು ನೀಡದ ಕಾರಣ ಬಸ್ ಅನ್ನು ವಾಪಾಸ್ ಪಡೆದಿದ್ದಾಗಿ ಅಪ್ಪ-ಮಗ ಹೇಳಿದ್ದಾರೆ.



ಸೇಲ್ ಮಾಡಿದ ಬಸ್ಸನ್ನು ತಾವೇ ಕದ್ದ ಪ್ರಕರಣದಲ್ಲಿ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ. ತನ್ನ ವಿರುದ್ಧ ದಾಖಲಾಗಿರುವ ದೂರು ಸುಳ್ಳು ಎಂದು ಸಮೀರ್ ಹಾಗೂ ಆತನ ತಂದೆ ಅಬ್ದುಲ್ ಖಾದರ್ ಹೇಳಿದ್ದಾರೆ. ವಿದೇಶದಲ್ಲಿರುವ ಆರೋಪಿ ಸಮೀರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಯಾವುದೇ ಬಸ್ಸನ್ನು ಕದ್ದಿಲ್ಲ ನನ್ನ ಬಸ್ಸನ್ನು ನಾನು ವಾಪಾಸ್ ಪಡೆದುಕೊಂಡಿದ್ದೇನೆ. ನನಗೆ ಬಸ್ನ ಮಾರಾಟದ ಮೊತ್ತ ಈವರಗೆ ಸಿಕ್ಕಿಲ್ಲ ಎಂದು ಶಾಝಿನ್ ಬಸ್ಸಿನ ಮಾಲೀಕ ಸಮೀರ್ ಹೇಳಿದ್ದಾರೆ.

ಬಸ್ಅನ್ನು ತುಮಕೂರಿನ ಮೋಹಮೆದ್ ಗೌಸ್ ಎನ್ನುವವರಿಗೆ ಮಾರಾಟ ಮಾಡಿದ್ದೆ. ಮಾರಾಟದ ಹಣ 9.50 ಲಕ್ಷ ರೂಪಾಯಿ ಆಗಿತ್ತು. ಮೊಹಮದ್ ಗೌಸ್ ಚೆಕ್ ಮೂಲಕ 9.50 ಲಕ್ಷ ರೂಪಾಯಿ ಹಣ ಪಾವತಿ ಮಾಡಿದ್ದರು. ಆದರೆ, ಅವರು ಕೊಟ್ಟ ಚೆಕ್ ಬೌನ್ಸ್ ಆಗಿತ್ತು. ಆ ಬಳಿಕ ಫೋನ್ಪೇ ಮೂಲಕ 2.26 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಒಂದು ಲಕ್ಷ ರೂಪಾಯಿ ಹಣವನ್ನು ಕ್ಯಾಶ್ ರೂಪದಲ್ಲಿ ಕೊಟ್ಟಿದ್ದಾರೆ. ಆ ಬಳಕ ಯಾವುದೇ ಹಣಕಾಸಿನ ವ್ಯವಹಾರ ನಮ್ಮ ನಡುವೆ ನಡೆದಿಲ್ಲ. ಆರು ತಿಂಗಳಾದರೂ ಬಸ್ ಮಾರಾಟದ ಹಣ ಬಂದಿಲ್ಲ. ಹಣ ಕೇಳಿದಾಗ ನಾಳೆ ಕೊಡುತ್ತೇವೆ ನಾಡಿದ್ದು ಕೊಡುತ್ತೇವೆ ಅಂತಾ ಹೇಳುತ್ತಿದ್ದರು ಎಂದು ಸಮೀರ್ ಹೇಳಿದ್ದಾರೆ.
ಆರು ತಿಂಗಳು ಕಾಲ ತುಮಕೂರಿನಲ್ಲಿ ಬಸ್ ಬಳಸಿದ್ದಾರೆ. ದಾಖಲೆ ಇಲ್ಲದೆ ಬಸ್ ಓಡಿಸಬೇಡಿ ಎಂದರೂ ಕೇಳಿಲ್ಲ. ನಾವು ತುಮಕೂರಿನವರು, ನಮ್ಮ ಬಗ್ಗೆ ನಿಮಗೆ ಗೊತ್ತಿದೆ ಅಲ್ವಾ. ಈಗಾಗಲೇ ನಿಮ್ಮೂರಿನ ಮೂರು ಮಂದಿಯನ್ನು ಸುಟ್ಟಿದ್ದೇವೆ ಎಂದೂ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಸಮೀರ್ ತಿಳಿಸಿದ್ದಾರೆ.
ಉಪಾಯ ಇಲ್ಲದೆ ನಾವು ಬಸ್ಅನ್ನು ವಾಪಾಸ್ ತಂದಿದ್ದೇವೆ. ನಾವು ಕೊಟ್ಟಿದ್ದ ಬಸ್ಸನ್ನು ಮರಳಿ ವಾಪಾಸ್ ತೆಗೆದುಕೊಂಡು ಬಂದಿದ್ದೇವೆ. ಮೊಹಮ್ಮದ್ ಗೌಸ್ ರವರ ಮಗ ಮೊಹಮ್ಮದ್ ಇರ್ಫಾನ್ ರವರು ಸೋಶಿಯಲ್ ಮೀಡಿಯಾ ಮುಖಾಂತರ ನನ್ನ ಹೆಸರನ್ನು ಹಾಳು ಮಾಡಿದ್ದಾರೆ. ಮೊಹಮ್ಮದ್ ಗೌಸ್ ಬಳಿ ಯಾವುದೇ ದಾಖಲೆಗಳಿಲ್ಲ. ಅದರೂ ಕಾಪು ಪೊಲೀಸ್ ಠಾಣೆ ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿದ್ದಾರೆ.