ಮಂಗಳೂರು: ಯಶವಂತಪುರ -ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16575/76) ಅನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸುವಂತೆ ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರು ಚೆನ್ನೈಯ ದಕ್ಷಿಣ ರೈಲ್ವೇ ವಿಭಾಗದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.



ಈ ರೈಲು ವಿಸ್ತರಣೆಗಾಗಿ ರೈಲ್ವೇ ಪ್ರಯಾಣಿಕರು, ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ನಿರಂತರ ಆಗ್ರಹಿಸುತ್ತಿದ್ದಾರೆ. ಇದು ಇಂದು ನಿನ್ನೆಯ ಬೇಡಿಕೆಯಲ್ಲ ರೈಲು ಸೇವೆ ಆರಂಭಗೊಂಡ ದಿನದಿಂದ ಮಂಗಳೂರು ಸೆಂಟ್ರಲ್ ಸ್ಟೇಷನ್ನಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸ ಲಾಗಿದೆ. ಹೊಸ ಪ್ಲಾಟ್ಫಾರ್ಮ್ಗಳು ಮತ್ತು ಪಿಟ್ಲೈನ್ ಸೇರ್ಪಡೆಯೊಂದಿಗೆ ನಿಲ್ದಾಣವು ಹೆಚ್ಚುವರಿ ರೈಲು ಸೇವೆಗಳಿಗೆ ಅವಕಾಶ ಕಲ್ಪಿಸುತ್ತದೆ.

ಇದಲ್ಲದೆ, ಕಾಚೇ ಗುಡ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ಅನ್ನು ಮುರುಡೇಶ್ವರಕ್ಕೆ ವಿಸ್ತರಿಸುವುದು ಮತ್ತು ಮಂಗಳೂರು ಸೆಂಟ್ರಲ್ನಲ್ಲಿ ಸ್ಟೇಬ್ಲಿಂಗ್ ಲೈನ್ನ ಸೇರ್ಪಡೆ ಪೂರ್ಣಗೊಳ್ಳುತ್ತಿದೆ. ಗೋಮಟೇಶ್ವರ ಎಕ್ಸ್ಪ್ರೆಸ್ ರೈಲನ್ನು ಮಂಗಳೂರುಸೆಂಟ್ರಲ್ಗೆವಿಸ್ತರಿಸುವುದರಿಂದ ಸ್ಥಳೀಯ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ.
ಅಲ್ಲದೆ ಬೆಂಗಳೂರಿಗೆ ಹೆಚ್ಚು ಅನುಕೂಲಕರ ಸಂಪರ್ಕ ಒದಗಿಸುತ್ತದೆ. ಅಲ್ಲದೆ ಗೋಮಟೇಶ್ವರ ಎಕ್ಸ್ಪ್ರೆಸ್ ರೈಲು ವಿಸ್ಟಾಡೋಮ್ ಬೋಗಿಯನ್ನೂ ಹೊಂದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.