ಮೂಡುಬಿದಿರೆ : ಕರಾವಳಿಯ ಪ್ರತಿಷ್ಟಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 30 ನೇ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ವೈಶಿಷ್ಟ್ಯ ಮೇಳಗಳ ಜೊತೆಗೆ ಡಿ.10ರಿಂದ 15ರ ವರೆಗೆ ಮೂಡುಬಿದಿರೆಯ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ ಮೋಹನ್ ಅಳ್ವಾ ಅವರು ತಿಳಿಸಿದ್ದಾರೆ.



ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ. ಮೋಹನ್ ಆಳ್ವಾ ಅವರು 30ನೇ ವರ್ಷದ ವಿರಾಸತ್ ಬಹಳ ಮಹತ್ವಪೂರ್ಣವಾಗಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವೈಶಿಷ್ಟ ಪೂರ್ಣಗೊಳಿಸಲಾಗಿದೆ. ಸಾಂಸ್ಕೃತಿಕ ವೈಭವದ ಜೊತೆಗಿನ ಮೇಳಗಳು, ಕಲಿಕೆ ಹಾಗೂ ಜೀವನೋಲ್ಲಾಸದ ಸೆಲೆಗಳಾಗಿವೆ. ಈ ಬಾರಿ ಸಾಂಘಿಕ ಪ್ರದರ್ಶನಗಳಿಗೆ ಒತ್ತು ನೀಡಲಾಗಿದ್ದು, ವಿವಿಧತೆಯಲ್ಲಿ ಏಕತೆಯ ಅಭಿವ್ಯಕ್ತಿಯಾಗಲಿದೆ. ಡಿ.10ರಿಂದ ಡಿ.14ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೇಳಗಳಿದ್ದರೆ, ಡಿ.15 ರಂದು ಸಂಪೂರ್ಣವಾಗಿ ಮೇಳ ಹಾಗೂ ಪ್ರದರ್ಶನಗಳಿಗೆ ಮೀಸಲಿಡಲಾಗಿದ್ದು ಪ್ರವೇಶ ಸಂಪೂರ್ಣ ಉಚಿತವಾಗಿದೆ ಎಂದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಪ್ರಸಾದ ಶೆಟ್ಟಿ ಅವರು ಉಪಸ್ಥಿತರಿದ್ದರು.

