Home ಕರಾವಳಿ ಮಂಗಳೂರು: ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ : 50...

ಮಂಗಳೂರು: ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ : 50 ಸಾವಿರ ರೂ. ದಂಡ..!!

0
ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅತ್ಯಾಚಾರ ಮಾಡಿದ ಬೆಳ್ತಂಗಡಿ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಮನೆಯ ಕೆ. ಸುಧೀರ್‌(27)ನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ನೊಂದ ಬಾಲಕಿಯು 13 ವಯಸ್ಸಿನವಳಾಗಿದ್ದು, ಆಕೆ ಆರೋಪಿ ಸುಧೀರ್‌ನ ಮನೆಗೆ ರಜಾ ದಿನಗಳಲ್ಲಿ ಹಾಗೆಯೇ ಇತರ ದಿನಗಳಲ್ಲಿ ಟಿ.ವಿ. ನೋಡಲು ಹೋಗುತ್ತಿದ್ದಳು. ಕೆಲವೊಂದು ಬಾರಿ ಸುಧೀರ್‌ ಮಾತ್ರ ಮನೆಯಲ್ಲಿರುತ್ತಿದ್ದು, 2021ನೇ ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಬಾಲಕಿ ಆತನ ಮನೆಗೆ ಟಿ.ವಿ. ನೋಡಲು ಹೋಗಿದ್ದಾಗ ಅಂಗಡಿಗೆ ಹೋಗಿ ಬರೋಣ ಎಂದು ತಿಳಿಸಿ, ಅಂಗಡಿಗೆ ಕರೆದುಕೊಂಡು ಹೋಗದೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸುಧೀರ್‌ನ ಅಜ್ಜಿಯ ಯಾರೂ ವಾಸವಿಲ್ಲದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ.

ಈ ವಿಚಾರವನ್ನು ತಾಯಿಗೆ ಹೇಳುತ್ತೇನೆ ಎಂದು ಬಾಲಕಿ ಹೇಳಿದಾಗ ತಾಯಿಗೆ ಹೇಳಿದರೆ ನೀನೆ ನನ್ನ ಬಳಿ ಬಂದದ್ದು ಎಂದು ಹೇಳಿ ಪೊಲೀಸ್‌ ಕಂಪ್ಲೇಟ್‌ ಕೊಡುತ್ತೇನೆ ಎಂದು ಹೇಳಿ ಹೆದರಿಸಿದ್ದ. ಅನಂತರದ ದಿನಗಳಲ್ಲೂ ಬಾಲಕಿ ಆತನ ಮನೆಗೆ ರಜಾ ದಿನಗಳಲ್ಲಿ ಟಿ.ವಿ. ನೋಡಲು ಹೋದಾಗ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಅತ್ಯಾಚಾರ ನಡೆಸಿದ್ದ. ಜತಗೆ ಆತನ ಅಜ್ಜಿ ಮನೆಯಲ್ಲಿಯೂ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಬಾಲಕಿ 2022 ಆಗಸ್ಟ್‌ ತಿಂಗಳ ಅನಂತರ ಗರ್ಭಿಣಿಯಾಗಿದ್ದಳು.
ಆತ ಮತ್ತು ಇತರರು ಸೇರಿ ಚಿಕ್ಕಮಗಳೂರು ಕಡೆ ಎಲ್ಲಿಯಾದರೂ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುವ ಎಂದು ಯೋಜನೆ ರೂಪಿಸಿದ್ದರು. ಮದುವೆ ಆಗಿದ್ದು ಗಂಡ-ಹೆಂಡತಿ ಎಂದು ಆಸ್ಪತ್ರೆಯವರಿಗೆ ನಂಬಿಸಲು ಆಕೆಗೆ ಕಾಲುಂಗುರ, ಬೆಳ್ಳಿಯ ಕರಿಮಣಿ ಸರ ಹಾಕಿಸಿ ಮದುಮಗಳಂತೆ ಅಲಂಕಾರ ಮಾಡಿಸಿ ಆತನನೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಾಲಕಿಯ ಮನೆಗೆ ತೆರಳಿ ಆಕೆಯ ತಾಯಿಗೆ ಮದುವೆ ಮತ್ತು ಬರ್ತ್‌ಡೇಗೆ ಹೋಗಲು ಇದೆ ಎಂದು ಹೇಳಿ ನೊಂದ ಬಾಲಕಿಯನ್ನು ಕರೆದುಕೊಂಡು ಸುಧೀರ್‌ ಮತ್ತು ಇತರರು 2022ರ ಡಿ. 17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಆಕೆ ತನ್ನ ಹೆಂಡತಿ ಎಂದು ವೈದ್ಯರಿಗೆ ತಿಳಿಸಿ ಗರ್ಭಪಾತ ಮಾಡಿಸಿದ್ದರು.
ಅನಂತರ ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಆಗಿನ ಬೆಳ್ತಂಗಡಿ ಪೊಲೀಸ್‌ ವೃತ್ತ ನಿರೀಕ್ಷಕ ಶಿವಕುಮಾರ್‌ ಬಿ. ಮತ್ತು ಸತ್ಯನಾರಾಯಣ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌.ಟಿ.ಎಸ್‌.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಅಭಿಯೋಜನೆ ಪರ ಒಟ್ಟು 24 ಸಾಕ್ಷಿದಾರರನ್ನು ವಿಚಾರಿಸಿ 62 ದಾಖಲೆಗಳನ್ನು ಗುರುತಿಸಲಾಯಿತು. ಪ್ರಕರಣದ ಸಾಕ್ಷ್ಯ , ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ-ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ನ. 21ರಂದು ಜಿಲ್ಲಾ ನ್ಯಾಯಾ ಧೀಶ ಮಾನು ಕೆ.ಎಸ್‌. ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಅತ್ಯಾಚಾರ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ: 376 ಮತ್ತು ಕಲಂ: 6 ಪೊಕ್ಸೋ ಕಾಯ್ದೆಯಂತೆ 20 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಲಾಗಿದೆ. ಸಾಕ್ಷ್ಯನಾಶ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ: 201ರಡಿ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ದಂಡದ ಹಣವಾದ 50 ಸಾವಿರ ರೂ. ಅನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಷನ್‌ ಪರ ಸರಕಾರದ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ. ಬದರಿನಾಥ ನಾಯರಿ ಅವರು ವಾದ ಮಂಡಿಸಿದ್ದರು.
ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರ 2 ಲಕ್ಷ ರೂ. ಪರಿಹಾರವನ್ನು ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದೆ.

LEAVE A REPLY

Please enter your comment!
Please enter your name here