ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಕೊಣಾಜೆಯ ಮಂಗಳೂರು ವಿವಿಯ ಮುಂಭಾಗ ಎಬಿವಿಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಡಳಿತ ಸೌಧ ನುಗ್ಗಲೆತ್ನಿಸಿದ ವೇಳೆ ಆಡಳಿತ ಸೌಧದ ಮುಂಭಾಗದ ಬಾಗಿಲಿನ ಗಾಜು ಪುಡಿಯಾದ ಘಟನೆ ನಡೆದಿದೆ.



ಈ ವೇಳೆ ಗಾಜು ತಾಗಿ ಓರ್ವ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿದೆ. ಆಡಳಿತ ಸೌಧದ ಮುಂಭಾಗ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮರವರು ಗಾಜು ಪುಡಿ ಮಾಡಿ ಪ್ರತಿಭಟನೆ ನಡೆಸಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಪ್ರತಿಭಟನೆ ನಿಮ್ಮ ಹಕ್ಕು, ಆದರೆ ತಮಗೆ ಪ್ರತಿಭಟನೆಗೆ ಅವಕಾಶ ನೀಡಿದ್ದರೂ ಈ ರೀತಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿದರು. ಬಳಿಕ ಉಪಕುಲಪತಿ ಧರ್ಮ ಅವರ ಮನವೊಲಿಕೆಗೆ ಮನವೊಲಿಯದ ವಿದ್ಯಾರ್ಥಿಗಳು ವಿವಿ ವಿರುದ್ಧ, ಉಪಕುಲಪತಿಯವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಮಸ್ಯೆಗಳು ಬಗೆಹರಿಯುವ ಬಗ್ಗೆ ಸರಿಯಾದ ಭರವಸೆ ದೊರಕುವವರೆಗೆ ತಾವು ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದ್ರು.