ಉಳ್ಳಾಲ : ತುಳು ರಂಗಭೂಮಿ ಕಲಾವಿದ, ನಾಟಕ ರಚನಕಾರ, ತುಳುಸಿನಿಮಾ ಒರಿಯರ್ದೊರಿ ಅಸಲ್ ತುಳು ಸಿನಿಮಾ ಖ್ಯಾತಿಯ ಅಶೋಕ್ ಶೆಟ್ಟಿ ಅಂಬ್ಲಿಮೊಗರು(53) ಸೋಮವಾರ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ಅಂಬ್ಲಿಮೊಗರುವಿನ ತಮ್ಮ ಅಶೋಕ್ ಶೆಟ್ಟಿಯವರು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ವೃತ್ತಿಪರ ಕಲಾವಿದರಾದ ಅಶೋಕ್ ಶೆಟ್ಟಿಯವರು ಖ್ಯಾತ ನಾಟಕಕಾರ ವಿಜಯ ಕುಮಾರ್ ಕೊಡಿಯಾಲ್ಬೈಲ್ ಅವರ ಕಲಾಸಂಗಮ ನಾಟಕ ತಂಡದಲ್ಲಿ ಸುದೀರ್ಘ ಕಾಲದ ಕಲಾ ಸೇವೆ ಸಲ್ಲಿಸಿದ್ದರು. ನಾಟಕ, ಸಿನೆಮಾ , ಧಾರವಾಹಿಗಳಲ್ಲಿ ನಟಿಸಿದ್ದ ಅವರು ಅನೇಕ ನಾಟಕಗಳನ್ನೂ ರಚಿಸಿದ್ದರು. ಒರಿಯರ್ದೊರಿ ಅಸಲ್ ತುಳು ಸಿನಿಮಾದಲ್ಲಿ ಅವರ ತೆಂಗಿನ ಕಾಯಿ ಕೀಳುವ ನಾಥು ಪಾತ್ರ ಬಹಳ ಖ್ಯಾತಿ ಹೊಂದಿತ್ತು. ಅಶೋಕ್ ಶೆಟ್ಟಿಯವರ ಅಗಲಿಕೆಗೆ ತುಳು ರಂಗಭೂಮಿ ಮತ್ತು ತುಳು ಸಿನೆಮಾ ರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತರು ಪತ್ನಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ.


