Home ಕರಾವಳಿ ಮಂಗಳೂರು:ಕರ್ತವ್ಯ ಲೋಪ ಪ್ರಕರಣ-ವೆನ್ಲಾಕ್ ಆಸ್ಪತ್ರೆಯ ಕಚೇರಿ ಅಧೀಕ್ಷಕ ಅಮಾನತು

ಮಂಗಳೂರು:ಕರ್ತವ್ಯ ಲೋಪ ಪ್ರಕರಣ-ವೆನ್ಲಾಕ್ ಆಸ್ಪತ್ರೆಯ ಕಚೇರಿ ಅಧೀಕ್ಷಕ ಅಮಾನತು

0

ಮಂಗಳೂರು: ಕರ್ತವ್ಯ ಲೋಪ ಎಸಗಿರುವ ಆರೋಪದ ಮೇರೆಗೆ ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕಚೇರಿ ಅಧೀಕ್ಷಕ ಲೋಕೇಶ್‌ರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಔಷಧ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿದ್ದಲ್ಲದೆ ಮರು ಅನುಮೋದನೆ ಪಡೆಯದೆ ಬಿಲ್ ಪಾವತಿಗಾಗಿ ಕಡತವನ್ನು ಮಂಡಿಸುವ ಮೂಲಕ ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದ ಆರೋಪದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಮಾನತಿನ ಅವಧಿಯಲ್ಲಿ ಲೋಕೇಶ್ ಕಚೇರಿಯ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡಬಾರದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ. ರೋಗಿಗಳ ಚಿಕಿತ್ಸೆಗೆ ಔಷಧ ಖರೀದಿಗಾಗಿ ಇ-ಟೆಂಡರ್ ಮೂಲಕ 26,04,914 ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, ಲೋಕೇಶ್ ಮರು ಅನುಮೋದನೆ ಪಡೆಯದೆ 5,08,720 ರೂ. ದರಪಟ್ಟಿ ಮೂಲಕ ಖರೀದಿಸಿ ಬಿಲ್ ಪಾವತಿಗಾಗಿ ಕಡತ ಮಂಡಿಸಿದ ಆರೋಪ ಎದುರಿಸುತ್ತಿದ್ದರು. ಖರೀದಿಯ ವಿಧಾನ ಟೆಂಡ‌ರ್ ಎಂದಿರುವುದನ್ನು ಮರು ಅನುಮೋದನೆ ಪಡೆಯದೆ ಕೊಟೇಶನ್ ಎಂದು ನಿಯಮಬಾಹಿರವಾಗಿ ತಿದ್ದುಪಡಿ ಮಾಡಿದ ಲೋಕೇಶ್, 4,33,315 ರೂ. ಮೊತ್ತಕ್ಕೆ ಔಷಧಗಳನ್ನು ಖರೀದಿಸಿ ಬಿಲ್ ಪಾವತಿಗಾಗಿ ಕಡತ ಮಂಡಿಸಿರುವುದನ್ನು ಕರ್ತವ್ಯ ಲೋಪವೆಂದು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here