ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಾಗೂ 7ನೇ ಹಂತದ ಚುನಾವಣೆ ಮುಗಿಲು ಕ್ಷಣಗಣನೆ ಶುರುವಾಗಿದೆ. ಸಂಜೆ 6.30ರ ಹೊತ್ತಿಗೆ ಎಕ್ಸಿಟ್ ಪೋಲ್ ವರದಿಗಳು ಬಹಿರಂಗೊಳ್ಳಲಿದೆ. ಇದಕ್ಕೂ ಕೆಲವೇ ಗಂಟೆ ಮುನ್ನ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬಾರಿಯೂ ಬಿಜೆಪಿ ನೇತೃತ್ವದ ಎನ್ಡಿಎ ಗೆಲುವು ಖಚಿತ. ಆದರೆ 2019ರ ಫಲಿತಾಂಶದಂತೆ ಬಿಜೆಪಿ ಹಾಗೂ ಬಿಜೆಪಿ ನಾಯಕರು ನಿರೀಕ್ಷಿದಷ್ಟು ಸ್ಥಾನ ಗೆಲ್ಲುವುದಿಲ್ಲ. 303 ಅಥವಾ ಅದಕ್ಕಿಂತ ಸ್ವಲ್ಪ ಸ್ಥಾನ ಹೆಚ್ಚು ಗೆಲ್ಲು ಸಾಧ್ಯತೆ ಇದೆ ಎಂದು ಪುನರುಚ್ಚರಿಸಿದ್ದಾರೆ. “ನನ್ನ ಅಂದಾಜಿನ ಪ್ರಕಾರ, ಬಿಜೆಪಿ ಹಿಂದಿನ ಅಥವಾ ಸ್ವಲ್ಪ ಹೆಚ್ಚಿನ ಸಂಖ್ಯೆಗಳೊಂದಿಗೆ ಅಧಿಕಾರಕ್ಕೆ ಹಿಂತಿರುಗಲಿದೆ. ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಆಗದು. ಆದರೆ ಭಾರತದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಿಂದ ಪಕ್ಷವು ಸಾಕಷ್ಟು ಬೆಂಬಲ ಗಳಿಸಲಿದೆ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರು ಪೂರ್ವ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಮತ್ತು ಮತ ಹಂಚಿಕೆಯಲ್ಲಿ ಸಂಭಾವ್ಯ ಏರಿಕೆಯನ್ನು ಸೂಚಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ತನ್ನ ಅಸ್ತಿತ್ವವನ್ನು ಪಕ್ಷ ಹೆಚ್ಚಿಸಿಕೊಂಡಿದೆ. “ನಾವು ಕೆಲವು ಮೂಲಭೂತ ಅಂಶಗಳನ್ನು ನೋಡಬೇಕು. ಅಧಿಕಾರದಲ್ಲಿರುವ ಸರ್ಕಾರ ಮತ್ತು ಅದರ ನಾಯಕನ ವಿರುದ್ಧ ಕೋಪವಿದ್ದರೆ, ಪರ್ಯಾಯವಿದೆಯೇ ಎಂಬುದನ್ನು ಲೆಕ್ಕಿಸದೆ, ಜನರು ಅವರ ವಿರುದ್ಧ ಮತ ಹಾಕುವ ಸಾಧ್ಯತೆಯಿದೆ. ಆದರೆ ಇಲ್ಲಿಯವರೆಗೆ ಅಂಥ ಅಲೆಯನ್ನು ನಾವು ಕಂಡಿಲ್ಲ. ಮೋದಿಜಿ ವಿರುದ್ಧ ವ್ಯಾಪಕವಾದ ನಿರಾಶೆ, ಈಡೇರದ ಆಕಾಂಕ್ಷೆಗಳು ಇರಬಹುದು, ಆದರೆ ವ್ಯಾಪಕವಾದ ಕೋಪವನ್ನು ನಾವು ಕೇಳಿಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಶನಿವಾರದ ಮತದಾನದೊಂದಿಗೆ, ಏಪ್ರಿಲ್ 19ರಂದು ಪ್ರಾರಂಭವಾದ ಮ್ಯಾರಥಾನ್ ಸರಣಿ ಮತದಾನದ ಪ್ರಕ್ರಿಯೆ ಮುಗಿಯುತ್ತಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಅಸೆಂಬ್ಲಿಗಳು ಸಹ ಚುನಾವಣೆಗೆ ಹೋಗಿವೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಜೂನ್ 2ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.


