ವಿಜಯನಗರ: ಯುವತಿಯೋರ್ವಳು 7-8 ವರ್ಷ ಪ್ರೀತಿ ಮಾಡಿದ ಯುವಕನ ಜೊತೆ ಮದುವೆ ಆಗಲು ಇನ್ನೇನು ಎರಡು ದಿನ ಬಾಕಿ ಇರುವಾಗಲೇ ಆಕೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿ ನಡೆದಿದೆ.ಮೃತಪಟ್ಟ ಯುವತಿ ಐಶ್ವರ್ಯ ರೈ ಎಂದು ಗುರುತಿಸಲಾಗಿದೆ. ಐಶ್ವರ್ಯ ರೈ ಹಾಗೂ ಆಕೆ ಮದುವೆಯಾಗಲು ಹೊರಟಿರುವ ಯುವಕ ಅಂತರ್ಜಾತಿಯಾಗಿದ್ದರು. ಈ ಕಾರಣಕ್ಕೆ ಯುವತಿ ಕೆಳ ಜಾತಿಯವಳು ಎಂಬ ಷರತ್ತುಗಳ ಮೇಲೆ ಯುವಕನ ಕಡೆಯವರು ಮದುವೆಗೆ ಒಪ್ಪಿದ್ದರು. ಷರತ್ತುಗಳು ಇದ್ದರೂ ಸಹ ಇಬ್ಬರು ಮದುವೆಯಾಗಲು ತಯಾರಾಗಿದ್ದರು. ಆದರೆ ಕೇವಲ 2 ದಿನಗಳಲ್ಲಿ ಯುವತಿ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಇದೇ ಕಾರಣಕ್ಕೆ ಯುವತಿಯ ಕೊಲೆಗೆ ಪ್ರಚೋದನೆ ನೀಡಲಾಗಿದೆ ಎಂದು ಐಶ್ವರ್ಯ ಪೋಷಕರು ಆರೋಪಿಸಿದ್ದಾರೆ. ಐಶ್ವರ್ಯ ಹಾಗೂ ವರ ಅಶೋಕ್ ಕಳೆದ 7-8 ವರ್ಷಗಳಿಂದ ಪ್ರೀತಿಸುತ್ತಿದ್ದರು. ನಮಗೂ ಅವರಿಗೂ ಹೊಂದಾಣಿಕೆ ಆಗಲ್ಲ, ನಾನು ಈ ಮದುವೆ ಬೇಡ ಎಂದು ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ ಮನಸ್ಸಿನವಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಯುವಕನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಯುವತಿಯ ಪೋಷಕರು ಯುವಕನ ಕುಟುಂಬದ ಮೇಲೆ ಆರೋಪಿಸಿದ್ದಾರೆ.


