ವಿಟ್ಲ: ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬಂದು ಯುವಕನನ್ನು ತನಗೆ ಒಪ್ಪಿಸುವಂತೆ ಪ್ರತಿಭಟನೆಗೆ ಕೂತ ವಿಚಿತ್ರ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರಿನ ಲಾಡ್ಜಲ್ಲಿ ಕೆಲಸಕ್ಕಿದ್ದ ಅಡ್ಯನಡ್ಕ ಭಜನಾ ಮಂದಿರ ಸಮೀಪದ ನಿವಾಸಿ ಅಸೈನಾರ್ ಎಂಬವರ ಪುತ್ರ ಮಹಮ್ಮದ್ ಕುಂಞಿ ಎಂಬಾತ ಹಲವು ಸಮಯಗಳಿಂದ ಬೆಂಗಳೂರಿನ ಬ್ಯೂಟಿ ಪಾರ್ಲರಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಒಂದು ಲಕ್ಷ ಕಬಳಿಸಿ ಕೈಕೊಟ್ಟಿದ್ದನೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿ ತಿಂಗಳ ಹಿಂದೆಯಷ್ಟೇ ಪ್ರಿಯಕರನ ಹುಡುಕುತ್ತಾ ಅಡ್ಯನಡ್ಕಕ್ಕೆ ಬಂದು ರಂಪಾಟ ನಡೆಸಿದ್ದಳು. ಆ ಸಂದರ್ಭ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯನ್ನು ಸಮಾಧಾನಪಡಿಸಿದ್ದಲ್ಲದೇ ಬೆಂಗಳೂರಿನಲ್ಲಿ ಪೊಲೀಸ್ ಠಾಣೇಗೆ ದೂರು ನೀಡುವಂತೆ ಮನವರಿಕೆ ಮಾಡಿ ಕಳುಹಿಸಿದ್ದರು. ಇದೀಗ ಮತ್ತೆ ಅದೇ ವಂಚನೆಗೊಳಗಾದ ಯುವತಿ ಮಂಗಳವಾರ ಸಾಯಂಕಾಲ ಅಡ್ಯನಡ್ಕ ದ ವಂಚಕ ಮಹಮ್ಮದ್ ಕುಂಞಿ ಮನೆ ಮುಂದೆ ಪ್ರತ್ಯಕ್ಷಳಾಗಿ ಧರಣಿ ಕುಳಿತಿದ್ದಾಳೆ.
ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಕೂಡಲೇ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ವಿಟ್ಲ ಠಾಣೆಗೆ ತನಿಖೆಗಾಗಿ ಕರೆತಂದಿದ್ದಾರೆ.